ಭಜ ಗೋವಿಂದಂ - ಕಂತು ೧

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ

ಭಜ ಗೋವಿಂದಂ

(ಮೋಹಮುದ್ಗರ)

ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ

 

ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು

ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ

ಕಂತು ೩: ನುಡಿ ೨೮ – ೩೧ : ಉಪಸಂಹಾರ

 

 

ಮೋಹಮುದ್ಗರ‌

ಭಜ ಗೋವಿಂದಂ

ಮೂಲ: ಆದಿ ಶಂಕರ

 

 ಮರುಳಿಗೆ ಮದ್ದು

ನೆನೆ ಗೋವಿಂದನ

ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ

ಭಜ ಗೋವಿಂದಂ ಭಜ ಗೋವಿಂದಂ

   ಗೋವಿಂದಂ ಭಜ ಮೂಢಮತೇ;

ಸಂಪ್ರಾಪ್ತೇ ಸನ್ನಿಹಿತೇ ಕಾಲೇ

   ನ ಹಿ ನ ಹಿ ರಕ್ಷತಿ ಡುಕೃಂಕರಣೇ.  

ನೆನೆ ಗೋವಿಂದನ, ನೆನೆ ಗೋವಿಂದನ,

   ಗೋವಿಂದನ ನೆನೆ ನೀ ಮರುಳಮತಿ;

ಕೊನೆಯಲಿ ಬಂದಿರೆ ನಿಗದಿತ ಕಾಲವು

   ಉಳಿಸದು ನಿನ್ನನು ಈ ಹೊರ ತಿಳಿವು. 

ಮೂಢ ಜಹೀಹಿ ಧನಾಗಮತೃಷ್ಣಾಂ

   ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ;

ಯಲ್ಲಭಸೇ ನಿಜಕರ್ಮೋಪಾತ್ತಂ 

   ವಿತ್ತಂ ತೇನ ವಿನೋದಯ ಚಿತ್ತಂ.

ಸಿರಿಯನು ಗಳಿಸುವ ದಾಹವನಿಂಗಿಸು;

   ಒಳ್ಳಿತ್ತಿಳಿವಿಂ ಮನವನು ತಣಿಸು;

ದುಡಿತದಿ ದೊರೆತುದೆ ನಿಜ ಫಲ ಎನ್ನುತ 

   ಮನವನು ಮೋಜಿಸು ನೀ ಅದರಲ್ಲೆ.

ನಾರೀಸ್ತನಭರನಾಭೀದೇಶಂ

   ದೃಷ್ಟ್ವಾ ಮಾ ಗಾ ಮೋಹಾವೇಶಂ;

ಏತನ್‌ಮಾಂಸವಸಾದಿವಿಕಾರಂ

   ಮನಸಿ ವಿಚಿಂತಯ ವಾರಂ ವಾರಂ.

ಹೆಣ್ಣಿನ ಮೊಲೆ ಹೊಕ್ಕುಳ ಸುಳಿ ನೋಡಲು

   ಸೆಳೆಯುವ ಮೋಹದಿ ನೀ ಬೀಳದಿರು;

ಮಾಂಸದ ಮುದ್ದೆಯು, ಜಿಡ್ಡಿನ ಗುಡ್ಡೆಯು

  ಎನ್ನುವುದನು ನೆನೆ ನೀ ತಿರುತಿರುಗಿ.

ನಲಿನೀದಲಗತಜಲಮತಿತರಲಂ,

   ತದ್ವಜ್ಜೀವಿತಮತಿಶಯಚಪಲಂ;

ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ

   ಲೋಕಂ ಶೋಕಹತಂ ಚ ಸಮಸ್ತಂ.

ಕಮಲೆಲೆ ಮೇಲಿನ ನೀರಿನ ತೆರದಲಿ

   ಚಣಿಕವು ಬಾಳುವೆ, ಅಸ್ಥಿರ ಇರವು.

ಅಳಲಿನ ಎಣ್ಣೆಯ ಹೊಯ್ದಿಹ ಜಗವನು 

   ಸುಡುತಿವೆ ರೋಗಾಹಂಕಾರಗಳು.

ಯಾವದ್ವಿತ್ತೋಪಾರ್ಜನಸಕ್ತಃ

   ತಾವನ್ನಿಜಪರಿವಾರೋ ರಕ್ತಃ;

ಪಶ್ಚಾಜ್ಜೀವತಿ ಜರ್ಜರದೇಹೇ

   ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ.

ಜೀವಿತ ಗಳಿಸುವ ಬಲವಿರುವನ್ನಕ

   ಎಲ್ಲರು ನೆಂಟರು, ಊರೇ ಬಳಗ.

ಕುಂದಿದ ಮುದಿ ಕಾಯವ ನೀ ಹೊಂದಲು 

   ಮನೆಯೊಳಗಾರೂ ಕೇಳಲು ಇಲ್ಲ!

ಯಾವತ್‌ ಪವನೋ ನಿವಸತಿ ದೇಹೇ

   ತಾವತ್‌ ಪೃಚ್ಛತಿ ಕುಶಲಂ ಗೇಹೇ;

ಗತವತಿ ವಾಯೌ ಘೇಹಾಪಾಯೇ

   ಭಾರ್ಯಾ ಬಿಭ್ಯತಿ ತಸ್ಮಿನ್‌ ಕಾಯೇ.

ಒಡಲೊಳು ಹರಣವು ಹರಿಯುವವರೆಗೂ

   "ಕುಶಲವೆ?" ಎನುವರು ಮನೆಯಲ್ಲೆಲ್ಲ.

ಹರಣವು ತೆರಳಲು ಕೊಳೆಯುವ ಕಾಯಕೆ 

   ಹೆದರುವಳೊಲವಿನ ಮಡದಿಯು ಕೂಡ.

ಬಾಲಸ್ತಾವತ್‌ ಕ್ರೀಡಾಸಕ್ತಃ,

   ತರುಣಸ್ತಾವತ್‌ ತರುಣೀಸಕ್ತಃ,

ವೃದ್ಧಸ್ತಾವಚ್ಚಿಂತಾಸಕ್ತಃ;

   ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ.

ಹುಡುಗಗೆ ಪರಿಪರಿ ಆಟದ ಚಿಂತನೆ,

   ತರುಣಿಯ ಚಿಂತನೆ ತರುಣನಿಗಿರಲು

ಮುದುಕಗೆ ಇಲ್ಲದ ಚಿಂತೆಯ ಚಿಂತನೆ;

   ಯಾರಿಗು ಇಲ್ಲವೊ ಪರಮದ ಪರಿವೆ! 

ಕಾ ತೇ ಕಾಂತಾ? ಕಸ್ತೇ ಪುತ್ರಃ?

   ಸಂಸಾರೋಽಯಮತೀವ ವಿಚಿತ್ರಃ!

ಕಸ್ಯ ತ್ವಂ? ಕಃ ಕುತ ಆಯಾತಃ?

   ತತ್ತ್ವಂ ಚಿಂತಯ ತದಿಹ ಭ್ರಾತಃ.

ಮಡದಿಯು ಯಾವಳು? ಯಾರೀ ಮಕ್ಕಳು?

   ವಿಚಿತ್ರವಲ್ಲವೆ ಈ ಸಂಸಾರ!

ಬಂದುದು ಎಲ್ಲಿಂದಾರಿಗೆ ಸೇರಿಹೆ?

   ಯೋಚಿಸು, ಗೆಳೆಯನೆ, ನೀನಿದನೆಲ್ಲ. 

ಸತ್ಸಂಗತ್ವೇ ನಿಸ್ಸಂಗತ್ವಂ, 

  ನಿಸ್ಸಂಗತ್ವೇ ನಿರ್ಮೋಹತ್ವಂ,

ನಿರ್ಮೋಹತ್ವೇ ನಿಶ್ಚಲತತ್ವಂ,

   ನಿಶ್ಚಲತತ್ವೇ ಜೀವನ್ಮುಕ್ತಿಃ.

ಸಜ್ಜನ ಸಂಗದಿ ಬೆಸುಗೆಯು ಕರಗಲು,

   ಹರಿವುದು ಮರುಳಿನ ದಪ್ಪನ ಪೊರೆಯು

ಒಡನೆಯೆ ಕಾಣುವಿ ಅಲುಗದ ನೆಲೆಯನು :

   ಬದುಕಲೆ ಬಿಡುಗಡೆ ಆ ನೆಲೆಯಿಂದೆ.

ವಯಸಿ ಗತೇ ಕಃ ಕಾಮವಿಕಾರಃ?

   ಶುಷ್ಕೇ ನೀರೇ ಕಃ ಕಾಸಾರಃ?

ಕ್ಷೀಣೇ ವಿತ್ತೇ ಕಃ ಪರಿವಾರಃ?

   ಜ್ಞಾತೇ ತತ್ತ್ವೇ ಕಃ ಸಂಸಾರಃ?

೧೦

ಹರೆಯವು ಇಳಿದಿರೆ ಕಾಮನ ಆಟವೆ?

   ನೀರೇ ಒಣಗಿರೆ ಎಲ್ಲಿಯ ಕೊಳವು?

ಸಿರಿತನ ಸವೆಯಲು ಬಂಧುಗಳುಳಿವರೆ?

   ತಿಳಿಯಮೆ ಅಳಿಯಲು ಬಾಳಿನ ಗೋಳೆ?

ಮಾ ಕುರು ಧನ ಜನ ಯೌವನ ಗರ್ವಂ;

   ಹರತಿ ನಿಮೇಷಾತ್ಕಾಲಃ ಸರ್ವಂ.

ಮಾಯಾಮಯಮಿದಮಖಿಲಂ ಹಿತ್ವಾ,

   ಬ್ರಹ್ಮಪದಂ ತ್ವಂ ಪ್ರವಿಶ, ವಿದಿತ್ವಾ.

೧೧

ಕಿಂಕರ ವಯ ಸಿರಿ ಇವೆ ಎನೆ ಬಿಂಕವೆ?

   ನಿಮಿಷದಿ ಕಾಲವು ಅಳಿಯುವುದವನು.

ಚಣಿಕವು ಮಾಯೆಯ ಜಗವಿದು ಎಂದರಿ;

   ಬ್ರಹ್ಮವನರಿ, ನೀ ಹೊಗು ಅದರಲ್ಲಿ.

ದಿನಯಾಮಿನ್ಯೌ, ಸಾಯಂ ಪ್ರಾತಃ,

   ಶಿಶಿರವಸಂತೌ ಪುನರಾಯಾತಃ;

ಕಾಲಃ ಕ್ರೀಡತಿ ಗಚ್ಛತ್ಯಾಯುಃ;

   ತದಪಿ ನ ಮುಂಚತ್ಯಾಶಾವಾಯುಃ.

೧೨

ಹಗಲೂ ಇರುಳೂ ಬೈಗೂ ಬೆಳಗೂ

   ಋತುಗಳು ತಿಥಿಗಳು ಬರುವವು ಮತ್ತೆ.

ಕಾಲದ ಆಟದಿ ಸಮೆದರು ಜೀವನ  

   ಇಳಿಯದು ಎನಿತೂ ಬಯಕೆಯ ರಭಸ.

ಕಾ ತೇ ಕಾಂತಾ? ಧನಗತಚಿಂತಾ?

   ವಾತುಲ ಕಿಂ, ತವ ನಾಸ್ತಿ ನಿಯಂತಾ?

ತ್ರಿಜಗತಿ, ಸಜ್ಜನಸಂಗತಿರೇಕಾ

   ಭವತಿ ಭವಾರ್ಣವತರಣೇ ನೌಕಾ.

೧೩

ಮಡದಿಯ, ಮಕ್ಕಳ, ದುಡ್ಡಿನ ಚಿಂತೆಯೆ?

   ಕದಡಿದ ಮನ, ನಿನಗೊಡೆಯನು ಯಾರು?

ಮೂಜಗದಲು ಒಳ್ಳೆಯರೊಡನಾಟವೆ

   ಬಾಳಿನ ಕಡಲನು ದಾಟಲು ನಾವೆ. 

ಬಿತ್ತರಿಕೆ, ಫೆಬ್ರುವರಿ ೧೦, ೨೦೨೫

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಮೋಹಮುದ್ಗರ
( ಅಥವಾ, ಭಜ   ಗೋವಿಂದಂ,.)

ಕಂತು ೧: ನುಡಿ ೧ ರಿಂದ  ೧೩ 
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು.

ನೆನೆ  ಗೋವಿಂದನ
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ‌

ಸಂಪರ್ಕ.:  ನಮೋವಿಶ್ ಯ್ಯಾಟ್ ಯಾಹೂ  ಡಾಟ್ ಕಾಮ್ :
ನಾನು, ಸಪ್ನಾ ಗೂಗ್ಲೇ.